ಫೆ.14ರಿಂದ ಯಕ್ಷಗಾನ ಸಾಹಿತ್ಯ ಸಮ್ಮೇಳನ
ಲೇಖಕರು : ಉದಯವಾಣಿ
ಶುಕ್ರವಾರ, ಫೆಬ್ರವರಿ 7 , 2014
|
ಕರ್ನಾಟಕ ಸಾಂಸ್ಕೃತಿಕ ಕಲಾ ಪ್ರತಿಷ್ಠಾನ ಬೆಂಗಳೂರು ಆಶ್ರಯದಲ್ಲಿ 9 ನೇ ಅಖೀಲ ಭಾರತ ಯಕ್ಷಗಾನ ಸಾಹಿತ್ಯ ಸಮ್ಮೇಳನವು ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ಫೆ.14ರಿಂದ ಮೂರು ದಿನ ಅದ್ಧೂರಿಯಾಗಿ ನಡೆಯಲಿದೆ.
ಸಮ್ಮೇಳನದ ಸರ್ವಾಧ್ಯಕ್ಷರಾಗಿ ಯಕ್ಷಗಾನ ಚಿಂತಕ ಜಿ.ಎಸ್. ಭಟ್ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಸಾಹಿತ್ಯ ಗೋಷ್ಠಿಗಳಲ್ಲಿ ಯಕ್ಷಗಾನದ ಸಂಪನ್ಮೂಲ ವ್ಯಕ್ತಿಗಳಾದ ಪ್ರೊ| ಡಿ.ಕೆ. ರಾಜೇಂದ್ರ, ಗಂಗಾಧರ ಶಾಸ್ತಿÅà ನಾಜಗಾರ, ಪ್ರೊ| ಡಿ.ಪಿ. ಕಿಶೋರ್, ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್, ಶ್ರೀಧರ ಹೆಗಡೆ, ಈಶ್ವರಚಂದ್ರ ಬೆಟಗೇರಿ, ಡಾ| ಮೈಲಹಳ್ಳಿ ರೇವಣ್ಣ, ಡಾ| ಅರ್ಜುನ ಗೊಳಸೊಂಗಿ, ಎಸ್.ಸಿ. ಅಮರಶೆಟ್ಟಿ, ಸುಬ್ರಾಯ ಭಟ್, ದೀಪಾ ಫಡೆR, ನಿರಂಜನ ರಾಜೇಅರಸ್, ಪಿ.ವಿ. ಪರಮೇಶ್ ಮುಂತಾದವರು ಭಾಗವಹಿಸಲಿದ್ದಾರೆ. ನಾಟ್ಯವಿದುಷಿ ಕೃಪಾ ಫಡೆR ಇವರಿಂದ ವಿಶೇಷ ಭರತ ಯಕ್ಷ ನೃತ್ಯವಿದೆ.
ಯಕ್ಷಗಾನದ ಎಲ್ಲಾ ಪ್ರಕಾರಗಳಿಂದ ಆಯ್ದ ಶ್ರೇಷ್ಠ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ನಡೆಯಲಿವೆ. ಯಕ್ಷಗಾನ ರಂಗದಲ್ಲಿ ಸಾಧನೆ ಮಾಡಿದ ಡಾ| ಭಾಸ್ಕರಾನಂದ ಕುಮಾರ್, ಬೇಗಾರ್ ಶಿವಕುಮಾರ, ಹನುಮಂತಪ್ಪ ಸಿರಿಮಂತಪ್ಪ ದಂಡಿಗದಾಸರ, ಬಸವಣ್ಣಿ ಕುಂಬಾರ, ರೇವಣ್ಣಸಿದ್ದಯ್ಯ ಬಸಯ್ಯ ಪುರಾಣಿಕಮಠ, ವೀರಭದ್ರಪ್ಪ, ಸತ್ಯಾನಂದ ರಾವ್ ಪೇಜಾವರ, ಡಿ ನಾಗರಾಜ್ರನ್ನು ಸನ್ಮಾನಿಸಲಾಗುವುದು.
ಸಮ್ಮೇಳನದ ಉದ್ಘಾಟನಾ ಹಾಗೂ ಸಮಾರೋಪ ಸಮಾರಂಭಗಳಿಗೆ ಸುತ್ತೂರು ಮಠದ ಶ್ರೀ ದೇಶಿಕೇಂದ್ರ ಮಹಾಸ್ವಾಮೀಜಿ ಹಾಗೂ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಸಿಎಂ ಸಿದ್ದರಾಮಯ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ, ಅರಣ್ಯ ಸಚಿವ ಬಿ ರಮಾನಾಥ ರೈ, ಕಂದಾಯ ಸಚಿವ ವಿ. ಶ್ರೀನಿವಾಸ ಪ್ರಸಾದ ಮತ್ತು ಸ್ಥಳೀಯ ಜನಪ್ರತಿನಿಧಿಗಳು ಪಾಲ್ಗೊಳ್ಳುವರು.
ಸಮ್ಮೇಳನಾಧ್ಯಕ್ಷ ಜಿ ಎಸ್ ಭಟ್
|
ಪ್ರತಿಷ್ಠಾನದ ಅಧ್ಯಕ್ಷ, ಯಕ್ಷಗಾನ ಕಲಾವಿದ ಸೂರ್ಯ ನಾರಾಯಣ ಪಂಜಾಜೆ
|
ಜಿ.ಎಸ್. ಭಟ್ಟರೆಂದೇ ಪ್ರಸಿದ್ಧರಾಗಿರುವ ಉತ್ತರ ಕನ್ನಡ ಮೂಲದ ಗಜಾನನ ಸುಬ್ರಾಯ ಭಟ್ಟರು ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ವಿಶ್ವಕೋಶದ ಸಂಪಾದಕರಾಗಿ ದುಡಿದವರು. ಮುಕ್ತ ಅಧ್ಯಯನ ಪತ್ರಿಕೆ ಸಂಪಾದಕರಾಗಿ ಸೇವೆ ಸಲ್ಲಿಸಿದವರು. ಜೊತೆಗೆ ಕುಟುಂಬ ಯೋಜನಾ ಸಂಘದ ಮೈಸೂರು ಘಟಕದ ಅಧ್ಯಕ್ಷರಾಗಿ, ಅನೇಕ ಸಾಂಸ್ಕೃತಿಕ ಕಾರ್ಯಕ್ರಗಳ ಸಂಘಟಕರಾಗಿ ಸದಾ ಉತ್ಸಾಹದ ಚಿಲುಮೆಯಾಗಿರುವರು. ಅವರಿಗೆ ಈಗಾಗಲೇ ಕನ್ನಡ ಸಂಸ್ಕೃತಿ ಸಂಪನ್ನ ಎಂಬ ಅಭಿನಂದನ ಗ್ರಂಥ ಸಮರ್ಪಣೆಗೊಂಡಿದೆ. ಅವರ ಕುರಿತ ಪಿಎಚ್ಡಿ ಅಧ್ಯಯನ ಕೂಡಾ ಸಾಗಿದೆ. ಲೇಖಕರಾಗಿ ಅವರು ಎಪ್ಪತ್ತಕ್ಕಿಂತಲೂ ಹೆಚ್ಚು ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ.
ಸದಾ ಕ್ರಿಯಾಶೀಲರೂ, ಜ್ಞಾನದಾಹಿಗಳೂ ಆದ ಭಟ್ಟರು ಹೊಸ ಹೊಸ ಜ್ಞಾನ ಕ್ಷೇತ್ರಗಳನ್ನು ಹುಡುಕಿಕೊಂಡು ಹೋಗುತ್ತಾರೆ. ಜಾನಪದ ಕ್ಷೇತ್ರ ಅವರ ಹೃದಯಕ್ಕೆ ಹತ್ತಿರವಾದ್ದರಿಂದ ತತ್ಸಂಬಂಧವಾದ ಸಂಶೋಧನೆ, ಅಧ್ಯಯನ, ವಿದ್ವತ್ಸಂಪಾದನೆ ಮತ್ತು ಪ್ರಸಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಮೈಸೂರಿನಲ್ಲಿ ಉತ್ತರ ಕನ್ನಡ ಜಿಲ್ಲಾ ಸಾಂಸ್ಕೃತಿಕ ಸಂಘವನ್ನು ಕಟ್ಟಿ ತನ್ಮೂಲಕ ಯಕ್ಷಗಾನಕ್ಕೆ ಸಂಬಂಧಿಸಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಮೈಸೂರಿನ ಜನತೆಗೆ ಯಕ್ಷಗಾನದ ಮಹತ್ವವನ್ನು, ಅದರ ಸೊಬಗನ್ನು ಪರಿಚಯಿಸುವುದರ ಜೊತೆಗೆ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಾರೆ. ಇವರು ಯಕ್ಷಗಾನ-ಬಯಲಾಟ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿರುವುದು ಜಿಲ್ಲೆಗೆ ಸಂತಸ ತಂದಿದೆ.
ಕೃಪೆ :
http://www.udayavani.com
|
|
|